ಉಡುಪಿ: ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೈಕ್ ನಲ್ಲಿ ಬಂದ ಮೂರು ಮಂದಿ ಯುವಕರ ತಂಡವೊಂದು ವೃದ್ದೆಯ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಸಿದು ಪರಾರಿಯಾದ ಘಟನೆ ಶನಿವಾರ ಬೆಳಿಗ್ಗೆ ಶಂಕರಪುರದಲ್ಲಿ ನಡೆದಿದೆ.
ಹೆಲೆನ್ ಡಿಸೋಜಾ (70) ಸರ ಕಳೆದುಕೊಂಡ ವೃದ್ಧ ಮಹಿಳೆ. ಶನಿವಾರ ಬೆಳಗ್ಗೆ 10 ಗಂಟೆಯ ವೇಳೆಗೆ ಈಕೆ ಮನೆಯಲ್ಲಿರುವಾಗ ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದ ಯುವಕರ ತಂಡ ಅಕ್ಕ ಪಕ್ಕದ ಮನೆಯವರ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಮಹಿಳೆಯ ಮೊಬೈಲ್ ನಂಬರ್ ಕೇಳಿ ಬರೆಯುತ್ತಿದ್ದಂತೆ ಒಬ್ಬಾತ ಮಹಿಳೆಯ ಕೊರಳಲ್ಲಿದ್ದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಕಸಿದು ಮನೆಯ ಕಂಪೌಂಡ್ ಹಾರಿದ್ದಾನೆ. ಉಳಿದ ಇಬ್ಬರು ಈತನೊಂದಿಗೆ ಸೇರಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಶಿರ್ವ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಿಸಿ ಫೂಟೇಜ್ ಲಭ್ಯವಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಶಿರ್ವ: ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕಸಿದುಕೊಂಡು ಪರಾರಿಯಾದ ಯುವಕರ ತಂಡ
More articles

