ಉಡುಪಿ: ಕನ್ನರ್ಪಾಡಿ–ಕಿನ್ನಿಮುಲ್ಕಿ 21ನೇ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ ಸೆ.14ರಿಂದ 23ರವರೆಗೆ ಗಣೇಶೋತ್ಸವ ಸಂಭ್ರಮದಿಂದ ನಡೆಯಲಿದೆ.
ಸೆ.14ರಂದು ಬೆಳಗ್ಗೆ 8.30ಕ್ಕೆ ಮೆರವಣಿಗೆಯಲ್ಲಿ ಗಣಪತಿ ವಿಗ್ರಹ ತರಲಾಗುವುದು. ಬೆಳಗ್ಗೆ 10ಕ್ಕೆ ಪ್ರಾರ್ಥನೆ ಹಾಗೂ 10.15ಕ್ಕೆ ಪ್ರಾಣಪ್ರತಿಷ್ಠೆ ವಿಧಿ ನೆರವೇರಲಿದೆ. ಉತ್ಸವದ ಅವಧಿಯಲ್ಲಿ ನಿತ್ಯ ಭಜನೆ, ಭಕ್ತಿಗೀತೆ, ಭಕ್ತಿ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಂಗಪೂಜೆ ನಡೆಯಲಿವೆ.
ಸೆ.15ರಂದು ಸಂಜೆ 5ರಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ, ರಾತ್ರಿ 9ಕ್ಕೆ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ರಾತ್ರಿ 7ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಸಿವಿಲ್ ಎಂಜಿನಿಯರ್ ಎಂ. ಗಂಗಾಧರ ರಾವ್ ಕನ್ನರ್ಪಾಡಿ (ನಂದ ಕುಮಾರ್) ಉದ್ಘಾಟಿಸಲಿದ್ದು, ನಾಡೋಜ ಡಾ. ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ವಿದ್ಯಾನಿಧಿ ವಿತರಿಸಲಾಗುವುದು.
ಸೆ.16ರಂದು ಯಕ್ಷಗಾನ ತಾಳಮದ್ದಳೆ, ಭಕ್ತಿ ಸಂಗೀತ, ರಂಗಪೂಜೆ ಹಾಗೂ ‘ಶ್ರಾವಣಿ’ ನಾಟಕ ಪ್ರದರ್ಶನ ನಡೆಯಲಿದೆ. ಸೆ.17ರಂದು ವಿದ್ವಾನ್ ಮಧೂರು ಪಿ. ಬಾಲಸುಬ್ರಹ್ಮಣ್ಯಂ ವೃಂದದಿಂದ ಭಕ್ತಿ ಸಂಗೀತ, ಬೇಬಿ ಶ್ರೀಯಾ ಅವರಿಂದ ಭಕ್ತಿಗೀತೆ ಹಾಗೂ ಸಾಂಸ್ಕೃತಿಕ ವೈಭವ ಮತ್ತು ಪುತ್ತೂರು ಜಗದೀಶ್ ಆಚಾರ್ಯ ಬಳಗದಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಸೆ.18ರಂದು ದರ್ಪಣ ಸ್ಕೂಲ್ ಆಫ್ ಪರ್ಫಾಮಿಂಗ್ ಆರ್ಟ್ಸ್ನ ವಿದುಷಿ ರಕ್ಷಾ ಮತ್ತು ರಮ್ಯಾ ಅವರಿಂದ ನೃತ್ಯ ಹಾಗೂ ಮಂಗಳೂರಿನ ಕಲಾ ಸಿರಿ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಸೆ.19ರಂದು ಭಕ್ತಿ ಸಂಗೀತ, ಉದ್ಯಾವರ ಶ್ರೀ ಕಲಾ ನಾಟ್ಯಾಲಯದಿಂದ ಭರತನಾಟ್ಯ ಹಾಗೂ ‘ಕವಿರತ್ನ ಕಾಳಿದಾಸ’ ಯಕ್ಷಗಾನ ಪ್ರದರ್ಶನವಿದೆ.
ಸೆ.20ರಂದು ಮೇದಿನಿ ಭಟ್ ಕಿನ್ನಿಮುಲ್ಕಿ ಮತ್ತು ಬಳಗದಿಂದ ಭಕ್ತಿ ಭಾವಗಾನ ಹಾಗೂ ‘ಕಥೆ ಏರ್ ಬರೆಪೆರ್’ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ. ಸೆ.21ರಂದು ಸಂಗೀತ ವೈವಿಧ್ಯ, ಭಜನೆ, ಭಕ್ತಿ ಸಂಗೀತ, ನೃತ್ಯ ಹಾಗೂ ‘ಯಾನೊರಿ ಬರೊಲಿಯಾ’ ತುಳು ಹಾಸ್ಯ ನಾಟಕ ಪ್ರದರ್ಶನ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಸೆ.22ರಂದು ಸಂಜೆ ಭಕ್ತಿ ಸಂಗೀತ ಹಾಗೂ ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಲಿದೆ. ರಾತ್ರಿ 7ಕ್ಕೆ ನಡೆಯುವ ಸಮಾರೋಪ ಸಮಾರಂಭಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸುವರು. ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿ. ನರೇಂದ್ರ ಬಹುಮಾನ ವಿತರಿಸುವರು. ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್ ಸುವರ್ಣ ವಿದ್ಯಾನಿಧಿ ವಿತರಿಸುವರು. ನಾಡೋಜ ಡಾ. ಕೃಷ್ಣ ಪ್ರಸಾದ್ ಉಪಸ್ಥಿತರಿರುವರು.
ಸೆ.23ರಂದು ಮಧ್ಯಾಹ್ನ 3ಕ್ಕೆ ರಾಜೇಶ್ ಶ್ಯಾನುಭಾಗ್ ಬಾರಕೂರು ತಂಡದಿಂದ ‘ಗಾನಾಮೃತ’ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5ಕ್ಕೆ ರಂಗಪೂಜೆ ಹಾಗೂ 5.30ಕ್ಕೆ ವೈಭವದ ವಿಸರ್ಜನಾ ಮೆರವಣಿಗೆ ನಡೆಯಲಿದೆ.








