ಉಡುಪಿ: ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರ (ರೈತ ಸೇವಾ ಕೇಂದ್ರ)ದ ಆವರಣದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ ಮೂರು ದಿನಗಳ ‘ಸಸ್ಯಸಂತೆ–2026’ಕ್ಕೆ ಚಾಲನೆ ದೊರೆಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಸಸ್ಯಸಂತೆಯನ್ನು ಉದ್ಘಾಟಿಸಿದರು.
ಮಳೆಗಾಲದಲ್ಲಿ ಆಯೋಜಿಸಿರುವ ಸಸ್ಯಸಂತೆ ರೈತರು ಹಾಗೂ ಸಾರ್ವಜನಿಕರಿಗೆ ತೋಟಗಾರಿಕೆ, ಹೂವು ಮತ್ತು ಹಣ್ಣಿನ ಗಿಡಗಳನ್ನು ಖರೀದಿಸಿ ಬೆಳೆಸಲು ಸಹಕಾರಿಯಾಗಲಿದೆ. ಮಳೆಯ ವಾತಾವರಣ ಗಿಡಗಳ ಸಮೃದ್ಧ ಬೆಳವಣಿಗೆಗೆ ಅನುಕೂಲಕರವಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ ಮಾತನಾಡಿ, ಸಸ್ಯಸಂತೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ಗಿಡಗಳು ನಗರ ಪ್ರದೇಶಗಳ ಮನೆಗಳ ಸುತ್ತಮುತ್ತ ಕೈತೋಟ ಬೆಳೆಸಲು ಸಹಕಾರಿಯಾಗಲಿವೆ. ರೈತರಿಗೆ ತೋಟಗಾರಿಕೆ ಕೃಷಿ ಕೈಗೊಳ್ಳಲು ಅಗತ್ಯವಾದ ಸಸಿಗಳು, ಗೊಬ್ಬರ ಹಾಗೂ ತೋಟಗಾರಿಕೆ ಸಲಕರಣೆಗಳು ಲಭ್ಯವಿದ್ದು, ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.
ಸಸ್ಯಸಂತೆಯಲ್ಲಿ ಹಣ್ಣು ಮತ್ತು ತರಕಾರಿ ಗಿಡಗಳು, ಹೂವಿನ ಗಿಡಗಳು, ಔಷಧೀಯ ಹಾಗೂ ಅಲಂಕಾರಿಕ ಸಸ್ಯಗಳು, ತೋಟಗಾರಿಕೆ ಸಲಕರಣೆಗಳು, ಗೊಬ್ಬರ ಸೇರಿದಂತೆ ವಿವಿಧ ಸಾಮಗ್ರಿಗಳು ಒಂದೇ ಸೂರಿನಡಿ ಲಭ್ಯವಿವೆ. ಇದರೊಂದಿಗೆ ಸಿರಿಧಾನ್ಯ ಉತ್ಪನ್ನಗಳು, ರಾಗಿ ಖಾದ್ಯಗಳು, ಚಿಯಾ ಬೀಜಗಳು, ವಿವಿಧ ಹಣ್ಣಿನ ಉತ್ಪನ್ನಗಳು ಹಾಗೂ ಹಲಸು–ಮಾವು ಹಣ್ಣಿನ ವಿವಿಧ ತಳಿಗಳ ಮಳಿಗೆಗಳನ್ನೂ ತೆರೆಯಲಾಗಿದೆ.
ಆ.14ರಿಂದ 16ರವರೆಗೆ ಸಸ್ಯಸಂತೆ ನಡೆಯಲಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಹೇಮಂತ್ ಕುಮಾರ್ ಎಲ್., ವಾರ್ತಾಧಿಕಾರಿ ಮಂಜುನಾಥ್ ಬಿ., ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಸುನಿಲ್ ಕುಮಾರ್ ವೈ.ಎಚ್., ವರುಣ ಕೆ.ಜೆ., ನಿಧೀಶ ಕೆ.ಜೆ., ರೈತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು


