Wednesday, April 22, 2026

ಹಿರೇಬೆಟ್ಟು ಮಹಾಲಿಂಗೇಶ್ವರ ದೇವಳ ಜೀರ್ಣೋದ್ಧಾರ – ವಿಜ್ಞಾಪನಾ ಪತ್ರ ಬಿಡುಗಡೆ

Must read

ಉಡುಪಿ: ಇಲ್ಲಿನ ಹಿರೆೇಬೆಟ್ಟು ಗ್ರಾಮದ ಭಟ್ರಕೋಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಸಾರ್ವಜನಿಕರಿಗೆ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭವು ಭಾನುವಾರ ನಡೆಯಿತು. ಮಾಹೆ ಮಣಿಪಾಲದ ಸಹಕುಲಾಧಿಪತಿ ಡಾ. ಎಚ್. ಎಸ್,ಬಲ್ಲಾಳ್ ಅವರು ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಜನರು ಒಂದೆಡೆ ಸೇರಿ ಮಾಡುವ ಕೆಲಸ ಯಶಸ್ವಿಯಾಗುತ್ತದೆ, ಮಣಿಪಾಲ ಇಂದು ಈ ಮಟ್ಟಕ್ಕೆ ಜನರಿಂದಲೇ ಬೆಳೆದಿದೆ. ಇತರ ಧರ್ಮಿಯರು ವಾರದಲ್ಲಿ ಒಂದು ದಿನ ತಮ್ಮ ಅರಾಧನಾಸ್ಥಳಗಳಿಗೆ ತಪ್ಪದೇ ಹೋಗ್ತಾರೆ, ನಾವು ಕೊಡ ದೇವಾಲಯಗಳಿಗೆ ಹೋಗುವ ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳಬೇಕು, ಆಗ ಅಲ್ಲಿ ಧರ್ಮದ ಜಾಗೃತಿಯಾಗುತ್ತದೆ. ದೇವಾಲಯಗಳು ಸುಸ್ಥಿತಿಯಲ್ಲಿ ಉಳಿಯುತ್ತವೆ. ಆದ್ದರಿಂದ ಈ ಪುರಾತನ ದೇವಾಲಯವನ್ನು ಎಲ್ಲರೂ ಸೇರಿ ಜೀರ್ಣೋದ್ಧಾರ ಮಾಡೋಣ ಎಂದು ಆಶಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು, ಜೀರ್ಣೋದ್ಧಾರದಂತಹ ಕೆಲಸಗಳು ಊರವರನ್ನು ಪಕ್ಷಬೇಧ ಮರೆತು ಒಂದೆಡೆ ಸೇರಿಸುವುದಕ್ಕೆ, ಸೌಹಾರ್ದತೆಗೆ ಕಾರಣವಾಗುತ್ತವೆ. ಹಣ ಇಲ್ಲದೇ ದೇವಾಲಯಗಳ ಕೆಲಸ ನಿಂತ ಉದಾಹರಣೆಗಳಿಲ್ಲ, ಊರವರು ಸೇರಿ ನಿಷ್ಠೆಯಿಂದ, ಭಕ್ತಿಯಿಂದ ಕೆಲಸ ಮಾಡಿದಾಗ ಅಸಾಧ್ಯ ಕೆಲಸ ಕೂಡ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಕುಗ್ರಾಮಗಳಲ್ಲಿರುವ ದೇವಾಲಯಗಳ‍ು ಜೀರ್ಣೋದ್ಧಾರವಾಗಿರುವುದೇ ಸಾಕ್ಷಿಯಾಗಿದೆ ಎಂದರು.

ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಅವರು, ದೇವಾಲಯಗಳ ಜಿರ್ಣೋದ್ಧಾರ ಎಂದರೇ ದೈವ ಋಣ ಮತ್ತು ಸಮಾಜ ಋಣ ತೀರಿಸುವುದಕ್ಕೊಂದು ಸದವಕಾಶ, ಈ ಸದವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳೋಣ, ಶಾಸಕನ ನೆಲೆಯಲ್ಲಿ ತನ್ನ ಸಂಪೂರ್ಣ ಸಹಕಾರ ಇದೆ ಎಂದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು, ನಮ್ಮ ಮನೆಗಳು ಚೆನ್ನಾಗಿದ್ದರೆ ಸಾಲದು, ಊರಿನ ದೇವಸ್ಥಾನಗಳು ಕೊಡ ಚೆನ್ನಾಗಿರಬೇಕು, ಆಗ ಮಾತ್ರ ಊರಿಗೆ ಹಿತ ಆಗುತ್ತದೆ, ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಗಳಿಗೆ ತಾನು ಕೈಜೋಡಿಸುವುದಾಗಿ ಭರವಸೆ ನೀಡಿದರು.

ಮಣಿಪಾಲ ವೈಷ್ಣವಿದುರ್ಗಾ ದೇವಾಲಯದ ಅಧ್ಯಕ್ಷ ಜಯರಾಜ್ ಹೆಗ್ಡೆ ಮತ್ತು ದೇವಳದ ಅರ್ಚಕ ಕುಟುಂಬದ ಸೀತಾರಾಮ ಭಟ್ ವೇದಿಕೆಯಲ್ಲಿದ್ದರು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ ಹಿರೇಬೆಟ್ಟು ಸ್ವಾಗತಿಸಿದರು, ಗೌರವಾಧ್ಯಕ್ಷ ಬೆಲ್ಪತ್ರೆ ಸಚ್ಚಿದಾನಂದ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು, ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಚಂದ್ರಶೇಖರ ನಾಯಕ್ ವಂದಿಸಿದರು.

spot_img

More articles

LEAVE A REPLY

Please enter your comment!
Please enter your name here