ಉಡುಪಿ: ವೇಗವಾಗಿ ಬೆಳೆಯುತ್ತಿರುವ ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಖಾಸಗಿ ಗ್ಯಾರೇಜು ಉದ್ಯಮಿಗಳು ಸುಧಾರಿತ ತಂತ್ರಜ್ಞಾನಕ್ಕೆ ತಮ್ಮನ್ನು ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದು ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದ ಬ್ರಿಗೇಡಿಯರ್ ಡಾ.ಸುರ್ಜಿತ್ ಸಿಂಗ್ ಪಾಬ್ಲಾ ರವರು ಸಲಹೆ ನೀಡಿದರು. ಅವರು ಭಾನುವಾರ ಮಣಿಪಾಲದಲ್ಲಿ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘ ಇವರ ಆಶ್ರಯದಲ್ಲಿ ಮತ್ತು MSDC (ಡಾ.ಟಿಎಂಎ ಪೈ ಪಾಲಿಟೆಕ್ನಿಕ್ ಇದರ ಅಂಗ ಸಂಸ್ಥೆ) ಇವರ ಸಹಭಾಗಿತ್ವದಲ್ಲಿ ಆಯೋಜಿಸಿದ ಸುಧಾರಿತ ತಂತ್ರಜ್ಞಾನದ (BS-6) ದ್ವಿಚಕ್ರ ವಾಹನಗಳ ದುರಸ್ತಿ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪಾಲಿಟೆಕ್ನಿಕ್ ಪ್ರಾಂಶುಪಾಲ ಬಿ ಎಚ್ ವಿ ಪೈ ಅವರು ಮಾತನಾಡಿ ಕಾಲೇಜು ಸಾಮಾಜಿಕ ಕಾರ್ಯಕ್ರಮಗಳಿಗೆ ವ್ಯಾಪಕ ಪ್ರೋತ್ಸಾಹ ನೀಡಿ ಉದಯೋನ್ಮುಖ ತಂತ್ರಜ್ಞರಿಗೆ ಬದುಕು ರೂಪಿಸಿಕೊಳ್ಳುವ ಅವಕಾಶಗಳನ್ನು ನಿರಂತರವಾಗಿ ಕಲ್ಪಿಸುತ್ತಾ ಇದೆ ಎಂದು ಹೇಳಿದರು.
ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಅಧ್ಯಕ್ಷರಾದ ರೋಷನ್ ಕರ್ಕಡ ಕಾಪು ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. MSDC ರಿಜಿಸ್ಟ್ರಾರ್ ಡಾ. ಆಂಜಯ್ಯ ದೇವಿನೇನಿ, ಆಟೋಮೊಬೈಲ್ ವಿಭಾಗದ ಉಸ್ತುವಾರಿ ಹಿತೇಂದರ್, ಸಂಘದ ಸ್ಥಾಪಕ ಅಧ್ಯಕ್ಷರಾದ ಪ್ರಭಾಕರ್ ಕೆ, ಹಿರಿಯ ಸಲಹೆಗಾರ ಯಾದವ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಎಸ್ ಜಿ ಕೃಷ್ಣ, ವಿನಯ್ ಕುಮಾರ್ ಕಲ್ಮಾಡಿ, ಕ್ರೀಡಾ ಕಾರ್ಯದರ್ಶಿ ಮಧುಸೂದನ್ ಕನ್ನರ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಕೋಶಾಧಿಕಾರಿ ಸಂತೋಷ್ ಕುಮಾರ್ ಸ್ವಾಗತಿಸಿ ಜೊತೆ ಕಾರ್ಯದರ್ಶಿ ರವಿ ಹಿರಿಯಡ್ಕ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ಶಿಬಿರ ಸಂಯೋಜಿಸಿ ನಿರೂಪಿಸಿದರು.

