ಉಡುಪಿ: ‘ನಾಯಕರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದು ಪಕ್ಷವು ನನ್ನನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಯಾರಿಗೆ ಅಸಮಾಧಾನ, ಯಾರಿಗೆ ಸಮಾಧಾನ ಎಂಬುದು ಈಗ ಮುಖ್ಯವಲ್ಲ. ಪಕ್ಷ ನನ್ನ ಮೇಲೆ ವಿಶ್ವಾಸವಿಟ್ಟು ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಸವಾಲು ನನ್ನ ಮುಂದಿದೆ’ ಎಂದು ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಹೇಳಿದರು.
ಉಡುಪಿ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರು ಘೋಷಿಸಿ ಬಳಿಕ ಹಿಂಪಡೆಯಲಾಗಿತ್ತು. ಅದೊಂದು ಕಹಿ ಘಟನೆ. ಅದಕ್ಕೆ ಕಾರಣವೇನೆಂಬುದು ನನಗೆ ಗೊತ್ತಿಲ್ಲ. ಆದರೆ ಅದು ಪಕ್ಷದ ನಿರ್ಣಯವಾಗಿದ್ದು, ಅದನ್ನು ಗೌರವಿಸಿದ್ದೇನೆ. ಇಂದು ಮಾತ್ರವಲ್ಲ, ಮುಂದೆಯೂ ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ’ ಎಂದರು.
‘ಅಧಿಕಾರಕ್ಕಾಗಿ ನಾನು ಎಲ್ಲೂ ಹೋಗಿಲ್ಲ, ವಾಮಮಾರ್ಗವನ್ನೂ ಹಿಡಿದಿಲ್ಲ. ತಾಳ್ಮೆಯಿಂದ ಇದ್ದರೆ ಕಾಂಗ್ರೆಸ್ನಲ್ಲಿ ಅಧಿಕಾರ ಸಿಗುತ್ತದೆ ಎಂಬುದಕ್ಕೆ ನಾನೇ ಉದಾಹರಣೆ. ಕಾಂಗ್ರೆಸ್ ಕಚೇರಿ ನನಗೆ ದೇವಾಲಯ ಇದ್ದಂತೆ. ಅದನ್ನು ಸದಾ ಪೂಜಿಸುತ್ತೇನೆ’ ಎಂದು ಹೇಳಿದರು.
‘ಆ ಸಂದರ್ಭದಲ್ಲಿ ನನ್ನ ಆಯ್ಕೆ ಸೂಕ್ತವಲ್ಲ ಎಂದು ಪಕ್ಷಕ್ಕೆ ಅನಿಸಿರಬಹುದು. ಈ ವಿಚಾರದಲ್ಲಿ ಯಾರ ಮೇಲೂ ಆಪಾದನೆ ಮಾಡಲು ಬಯಸುವುದಿಲ್ಲ. ಪಕ್ಷದ ತೀರ್ಮಾನವನ್ನು ಗೌರವಿಸಿದ ರೀತಿಗೋ ಅಥವಾ ತಾಳ್ಮೆಯಿಂದ ನಡೆದುಕೊಂಡದ್ದಕ್ಕೋ ಮತ್ತೆ ಅಧ್ಯಕ್ಷ ಸ್ಥಾನ ನೀಡಿರಬಹುದು. ಪಕ್ಷಕ್ಕೆ ನನ್ನ ಸೇವೆ ಅಗತ್ಯವಿರುವವರೆಗೆ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸುತ್ತೇನೆ’ ಎಂದು ಕಿಶನ್ ಹೆಗ್ಡೆ ಹೇಳಿದರು.
‘ಪಕ್ಷದ ತೀರ್ಮಾನಕ್ಕೆ ಬದ್ಧ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವೆ’

