ಉಡುಪಿ: ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರದ ಮೂಲಕ ಭಾರತ ಪ್ರತೀಕಾರವನ್ನು ತೀರಿಸಿಕೊಂಡಿದೆ. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ 9 ಉಗ್ರರ ನೆಲೆಗಳನ್ನು ಭಾರತ ಉಡೀಸ್ ಮಾಡಿತ್ತು. ಭಾರತ ಕೊಟ್ಟ ಈ ಏಟಿನಿಂದ ಚೇತರಿಸಿಕೊಳ್ಳುವ ಮುನ್ನವೇ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
ಹೌದು, ಭಾರತದ ಆಪರೇಷನ್ ಸಿಂಧೂರ ಬೆನ್ನಲ್ಲೇ ಗುರುವಾರ ಲಾಹೋರ್ನಲ್ಲಿ ದೊಡ್ಡ ದೊಡ್ಡ ಸ್ಫೋಟ ಸಂಭವಿಸಿದೆ. ಲಾಹೋರ್ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ಸ್ಫೋಟಗಳು ಸಂಭವಿಸಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಜನ ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿಹೋಗುತ್ತಿರುವ ದೃಶ್ಯಗಳು ಹಾಗೂ ದಟ್ಟವಾದ ಹೊಗೆ ಕಂಡುಬಂದಿದೆ. ಈ ಪ್ರದೇಶ ಲಾಹೋರ್ನ ಸೇನಾ ಕಂಟೋನ್ಮೆಂಟ್ಗೆ ಹೊಂದಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 5-6 ಅಡಿ ಉದ್ದದ ಡ್ರೋನ್ನಿಂದ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದಿರುವ ಪೊಲೀಸ್ ಮೂಲಗಳು ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿಸಿವೆ. ಆದರೆ, ಇದುವರೆಗೂ ಯಾವುದೇ ರೀತಿಯ ಸಾವು-ನೋವುಗಳ ವರದಿಯಾಗಿಲ್ಲ.
ಲಾಹೋರ್, ಇಸ್ಲಾಮಾಬಾದ್ ಏರ್ಪೋರ್ಟ್ ಕ್ಲೋಸ್
ಇನ್ನೂ ಇದಕ್ಕೂ ಮುನ್ನ ಪಾಕಿಸ್ತಾನ ಲಾಹೋರ್ ಹಾಗೂ ಇಸ್ಲಾಮಾಬಾದ್ನ ವಿಮಾನ ನಿಲ್ದಾಣಗಳಲ್ಲಿನ ಎಲ್ಲ ವಾಣಿಜ್ಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಬುಧವಾರ ರಾತ್ರಿ ಈ ನಿರ್ಧಾರ ತೆಗೆದುಕೊಂಡಿದ್ದು, ಕರಾಚಿ ಏರ್ಪೋರ್ಟ್ ಅನ್ನು ಕೂಡ ಕ್ಲೋಸ್ ಮಾಡಲಾಗಿದೆ. ಸಿಯಾಲ್ಕೋಟ್ ಏರ್ಪೋರ್ಟ್ ಅನ್ನು ಕೂಡ ಮುಚ್ಚಿರುವುದು ಕುತೂಹಲ ಕೆರಳಿಸಿದೆ. ಭಾರತದ ಆಪರೇಷನ್ ಸಿಂಧೂರಕ್ಕೆ ರಿಯಾಕ್ಟ್ ಮಾಡಲು ದಾಳಿಯ ಸಂಚನ್ನು ಹೆಣೆಯುತ್ತಿರುವ ರೀತಿ ಕಾಣುತ್ತಿದೆ. ಅದಕ್ಕಾಗಿ ಎರಡು ದಿನ ಅಂದ್ರೇ 48 ಗಂಟೆಗಳ ಕಾಲ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಮುಚ್ಚಿದೆ. ಪಾಕಿಸ್ತಾನ ಪ್ರತೀಕಾರದ ಮಾತುಗಳನ್ನಾಡುತ್ತಿರುವುದರಿಂದ ಗಡಿಯಲ್ಲಿ ಭಾರತ ಸರ್ವ ಸನ್ನದ್ಧವಾಗಿದ್ದು, ತನ್ನ ಯುದ್ಧ ವಿಮಾನಗಳನ್ನು ಗಡಿಯುದ್ಧಕ್ಕೂ ಕಾವಲಿಗೆ ನಿಲ್ಲಿಸಿದೆ. ಎಲ್ಲ ರೀತಿಯಿಂದಲೂ ಪಾಕ್ಗೆ ತಿರುಗೇಟು ನೀಡಲು ಭಾರತ ಸಜ್ಜಾಗಿದೆ.

