ಉಡುಪಿ: ನಕ್ಸಲ್ ಚಟುವಟಿಕೆಯಲ್ಲಿದ್ದು ಬಳಿಕ ಅದನ್ನು ತೊರೆದು ಸಾಂಸಾರಿಕ ಜೀವನ ನಡೆಸುತ್ತಿರುವ ತೊಂಬಟ್ಟು ಲಕ್ಷ್ಮೀ ಫೆ.2ರಂದು ಶರಣಾಗತಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತಿಗೆ ಸಿದ್ಧತೆ ನಡೆದಿದ್ದು, ಬೆಳಿಗ್ಗೆ 11 ಗಂಟೆಗೆ ಶರಣಾಗಲಿದ್ದಾರೆ ಎಂದು ತಿಳಿದುಬಂದಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟದ ತಪ್ಪಲಿನ ತೊಂಬೊಟ್ಟು ನಿವಾಸಿ ಲಕ್ಷ್ಮಿ, 2006ರಿಂದ ಕಣ್ಮರೆಯಾಗಿದ್ದರು. ಬಳಿಕ ಆಂಧ್ರಪ್ರದೇಶದಲ್ಲಿ ಪತಿಯ ಜೊತೆಗೆ ವಾಸವಾಗಿದ್ದಾರೆ. ಇವರು ಆಂಧ್ರಪ್ರದೇಶದಲ್ಲಿ ಪೊಲೀಸರಿಗೆ ಶರಣಾಗಿರುವ ನಕ್ಸಲ್ ಆರೋಪಿತ ಸಂಜೀವನ ಪತ್ನಿ. ಆಂಧ್ರ ಪ್ರದೇಶದಲ್ಲಿ ಲಕ್ಷ್ಮಿ ವಿರುದ್ಧ ಯಾವುದೇ ಪ್ರಕರಣ ಇಲ್ಲ. ಆದರೆ ಉಡುಪಿ ಜಿಲ್ಲೆಯ ಅಮಾವಾಸ್ಯೆ ಬೈಲು ಠಾಣೆಯಲ್ಲಿ ಈಕೆಯ ವಿರುದ್ಧ ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಇದೀಗ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಮೂಲಕ ಲಕ್ಷ್ಮೀ ಶರಣಾಗತಿಗೆ ಸಿದ್ಧತೆಗಳು ನಡೆದಿವೆ