ಉಡುಪಿ: ಸಿಎಂ ಸಿದ್ದರಾಮಯ್ಯನವರು ಆಡಳಿತದ ಮೇಲೆಯೂ ಸ್ವಲ್ಪ ಹಿಡಿತ ಇಟ್ಟುಕೊಳ್ಳುವುದು ಒಳ್ಳೆಯದು. ಆಪ್ತ ವಲಯದ ಮೇಲಿನ ಭ್ರಷ್ಟಾಚಾರದ ಆರೋಪಗಳು ಶೋಭೆ ತರುವುದಿಲ್ಲ. ಹೀಗಾಗಿ ಅದೆಲ್ಲವನ್ನು ಸರಿಮಾಡಿಕೊಂಡು ಪಾರದರ್ಶಕವಾದ ಆಡಳಿತ ನೀಡಬೇಕೆನ್ನುವುದು ನನ್ನ ಆಶಯ ಎಂದು ನಟ, ನಿರ್ದೇಶಕ ಪ್ರಕಾಶ್ ರಾಜ್ ತಿಳಿಸಿದರು.
ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೇವರಾಜ ಅರಸು ಕಾಲಘಟ್ಟ ಬೇರೆ, ಸಿದ್ದರಾಮಯ್ಯ ಕಾಲಘಟ್ಟ ಬೇರೆಯಾಗಿದೆ. ಸಿದ್ದರಾಮಯ್ಯ ಒಳ್ಳೆಯ ಅಹಿಂದ ನಾಯಕರು. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ನಾನು ಬರೀ ಹೊಗಳುಭಟ್ಟ ಅಲ್ಲ. ಪ್ರಶ್ನೆಯನ್ನು ಕೇಳುತ್ತಾನೆ. ನಾವು ಯಾವುದೇ ರಾಜಕೀಯ ಪಕ್ಷವಲ್ಲ, ನಿರಂತರ ವಿರೋಧಪಕ್ಷ ಎಂದು ಹೇಳಿದರು.
ನನಗೆ ಜೀವನದಲ್ಲಿ ಹಿಂದಿರುಗಿ ನೋಡುವ ಅಭ್ಯಾಸನೇ ಇಲ್ಲ. ಮುಂದೆ ಸಾಗುತ್ತಾ ಪ್ರಯಾಣ ಬೆಳೆಸುವುದು ನನ್ನ ಗುರಿ. ಜೀವನದಲ್ಲಿ ಪ್ರಯಾಣ ಬಹಳ ಮುಖ್ಯ ಎಂದರು.
ಮುಂದಿನ ಸಿನಿಮಾಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಮೌಳಿ ನಿರ್ದೇಶನದ ‘ವಾರಾಣಸಿ’, ಪುರುಷಾವತಾರ, ದಳಪತಿ ವಿಜಯ್ ನಟನೆಯ ‘ಜನನಾಯಗನ್’, ಹಿಂದಿಯ ದೃಶ್ಯಂ 3 ಮೊದಲಾದ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದರು.
