ಉಡುಪಿ: ಹಿರಿಯ ನಾಗರಿಕರು ಸಮಾಜದಲ್ಲಿ ಗೌರವಿತವಾಗಿ ಉತ್ತಮ ಗುಣಮಟ್ಟದ ಜೀವನ ನಡೆಸಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದರು.
ಅವರು ಇಂದು ಉಡುಪಿ ನಗರದ ಬನ್ನಂಜೆಯ ಶ್ರೀ ನಾರಾಯಣಗುರು ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆಗಳು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ವೃದ್ಧಾಶ್ರಮಗಳು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿರಿಯ ನಾಗರಿಕರ ಶ್ರೇಯ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆಗಳು ಹಾಗೂ ಅವರುಗಳ ರಕ್ಷಣೆಗೆ ಕಾನೂನುಗಳನ್ನು ಜಾರಿಗೆ ತಂದಿದೆ ಇವುಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕು ಎಂದರು.
ಹಿರಿಯ ನಾಗರಿಕರು ತಮ್ಮ ಕೆಲಸ ನಿಯಮಿತ ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರುಗಳಿಗೆ ಪ್ರಥಮ ಅದ್ಯತೆ ನೀಡಿ ಅವರ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಅವರ ಸಂದರ್ಶನಕ್ಕೆ ಸಮಯವನ್ನು ಮೀಸಲಿರಿಸಬೇಕು ಎಂದು ಹೇಳಿದರು.
ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಸೇರಿದಂತೆ ಮತ್ತಿತರ ಪಿಂಚಣಿ ಯೋಜನೆಗಳ ಪ್ರಯೋಜನ ಪಡೆಯುವಂತೆ ಅವಕಾಶ ಕಲ್ಪಿಸಬೇಕು ಎಂದ ಅವರು
ಜಿಲ್ಲೆಯು ಶಾಂತಿಯುತವಾಗಿದ್ದು ,ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿರುವ ಹಿನ್ನೆಲೆ ಅನೇಕ ಅಧಿಕಾರಿಗಳು ತಮ್ಮ ನಿವೃತ್ತಿ ಜೀವನವನ್ನು ಈ ಜಿಲ್ಲೆಯಲ್ಲಿ ನಡೆಸುತ್ತೇವೆ ಎಂದು ಹೇಳುವುದು ಗಮನಾರ್ಹ ಎಂದರು.
ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಮಾತನಾಡಿ, ಹಿರಿಯ ನಾಗರಿಕರಿಗೆ ಸಮಾಜ ಗೌರವ ಕೊಡಬೇಕು, ಅವರಿಗೆ ಸಿಗಬೇಕಾದ ಅವಕಾಶಗಳು ಒದಗಿಸುವ ನೆಲೆಯಲ್ಲಿ ಸ್ಪಂದಿಸಬೇಕು, ಅವರಿಗೆ ಸಾಂತ್ವನದ ಮಾತುಗಳ ನಾಡಿ ಅವರೊಂದಿಗೆ ನಾವಿದ್ದೇವೆ ಎಂಬ ಆತ್ಮವಿಶ್ವಾಸವನ್ನು ಮೂಡಿಸಬೇಕು ಎಂದರು.
ಮಕ್ಕಳು ಹಿರಿಯರನ್ನು ನೋಡಿಕೊಳ್ಳದೆ ಇದ್ದ ಸಂದರ್ಭದಲ್ಲಿ ಹಾಗೂ ತೊಂದರೆ ಕೊಟ್ಟಾಗ ಅವರ ರಕ್ಷಣೆಗೆ ಹಿರಿಯ ನಾಗರಿಕರ ಪೋಷಣೆ ,ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆಯನ್ನು ಜಾರಿಗೆ ತಂದಿದೆ ಇದು ಮುಖ್ಯವಲ್ಲ ನಮ್ಮ ಮನಸ್ಥಿತಿ ಮುಖ್ಯ ,ಮಕ್ಕಳು ಆಸ್ತಿಗಾಗಿ ಪೋಷಕರನ್ನು ನೋಡದೆ ತಮ್ಮ ಕರ್ತವ್ಯವೆ ಎಂದು ತಿಳಿದು ಮಾನವೀಯ ನೆಲೆಯಲ್ಲಿ ಜವಾಬ್ದಾರಿ ಅರಿತು ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಕಾರ್ಯದರ್ಶಿ ಶರ್ಮಿಳಾ ಮಾತನಾಡಿ, ಹಿರಿಯ ನಾಗರಿಕರು ಪ್ರತಿ ದಿನ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ಕೈಗೊಳ್ಳುವುದರೊಂದಿಗೆ ಕ್ರಿಯಾಶೀಲರಾಗಿರಬೇಕು ಎಂದ ಅವರು ಇತ್ತೀಚಿನ ದಿನಗಳಲ್ಲಿ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಆತಂಕದ ವಿಷಯ ಎಂದರು.
ಡಾ. ಎ.ವಿ ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ನಿರ್ದೇಶಕ ಡಾ ಪಿ .ವಿ.ಭಂಡಾರಿ ಅವರು,’ಹಿರಿಯ ನಾಗರಿಕರ ಮಾನಸಿಕ ಆರೋಗ್ಯ ‘ಕುರಿತು ಹಾಗೂ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ಟ’ ಹಿರಿಯ ನಾಗರಿಕರಿಗೆ ಕಾನೂನು ಅರಿವು’ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿತರಣೆ ಮಾಡಲಾಯಿತು ಹಾಗೂ ಹಿರಿಯ ನಾಗರಿಕರಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮಗಳು ನಡೆದವು.
ವೇದಿಕೆ ಕಾರ್ಯಕ್ರಮಕ್ಕೆ ಮುನ್ನ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕಿನ ಮಹಾಪ್ರಬಂಧಕ ಪಂಡಿತ್ .ಜಿ,ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ್, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ,ಸಿ.ಎಸ್.ರಾವ್, ವಕೀಲರ ಸಂಘದ ಅಧ್ಯಕ್ಷ ರೊನಾಲ್ಡ್ ಪ್ರದೀಪ್ ಕುಮಾರ್, ವಾಸುದೇವ ರಾವ್, ಸದಾನಂದ ಹೆಗಡೆ ,ಸರಳ ಕಾಂಚನ್ ಉಪಸ್ಥಿತರಿದ್ದರು.